Saturday, 27 October 2012

ಕಸದಿಂದ ರಸ




ಹಿರಿಯರು
ಹೇಳುತ್ತಿದ್ದರು
ಕಸದಿಂದ
ರಸ

ಹೌದು,
ನಿಜ

ಬೆಂಗಳೂರಿನ
ಗಲ್ಲಿ ಗಲ್ಲಿಗಳಿಂದ
ಧಾರಾಕಾರವಾಗಿ
ಹರಿದು ಬರುತ್ತಿದೆ

ಕಸದಿಂದ…….. ರಸ!!!
ಕಸದಿಂದ……...ರಸ!!!
ಕಸದಿಂದ……….ರಸ!!!

Friday, 26 October 2012

ಮುತ್ತಿನ ಹಾರ



ಪ್ರಣಯದ
ಉತ್ತುಂಗ
ಶಿಖರದಲ್ಲಿದ್ದಾಗ
ಏನು
ಒಡವೆ
ಬೇಕೋ
ತಗೋ
ಚಿನ್ನ
ಕೊಡಿಸ್ತೀನಿ
ಅಂದೆ
ನನಗೇನೊ
ಬೇಡ
ಮುತ್ತಿನಹಾರ
ಸಾಕು
ಅಂದ್ಲು.
ನಾಚುತ್ತಾ

Thursday, 25 October 2012

ನಾವಿಬ್ಬರು:


                                                                                 
 
ನಾವಿಬ್ಬರು
ನಮಗಿಬ್ಬರು
ಮಗ
ಅಮೇರಿಕಾದಲ್ಲಿ
ಮಗಳು
ಇಂಗ್ಲೆಂಡಿನಲ್ಲಿ
ನಾವಿಬ್ಬರು
ಭಾರತದಲ್ಲಿ

Monday, 22 October 2012

ರಾಜಕಾರಣಿಗಳಿಗೆ ನಿವೃತ್ತಿ ಯಾಕಿಲ್ಲ?


ರಾಜಕಾರಣಿಗಳಿಗೆ ನಿವೃತ್ತಿ ಎಂಬುದು ನಮ್ಮ ದೇಶದಲ್ಲಿ ಯಾಕಿಲ್ಲ? ಈ ಕೂಗು ಇಂದು ನಿನ್ನೆಯದಲ್ಲ, ಅನೇಕ ವರ್ಷಗಳಿಂದಲೂ ಜನ ಸಾಮಾನ್ಯ ಕೇಳುತ್ತಲೇ ಇದ್ದಾನೆ, ಇದರ ಬಗ್ಗೆ ಅನೇಕ ಬಾರಿ ಪತ್ರಿಕೆಗಳಲ್ಲಿ, ಟಿ.ವಿ ವಾಹಿನಿಗಳಲ್ಲಿ ಚರ್ಚೆ ಕೂಡ ಆಗಿದೆ. ಆದರೆ ಉತ್ತರ ಮಾತ್ರ ಸಿಕ್ಕಿಲ್ಲ.  ರಾಜಕಾರಣಿಗಳಿಗೆ ೭೦-೮೦-೯೦ ವರ್ಷವಾದರೂ ಅಧಿಕಾರದ ವ್ಯಾಮೋಹ ಹೋಗುವುದಿಲ್ಲ ಯಾಕೆ? ಸರ್ಕಾರಿ ನೌಕರರಿಗೆ ೬೦ ವರ್ಷ ತುಂಬಿದ ಮೇಲೆ ಅವರಿಗೆ ಕಡ್ಡಾಯವಾಗಿ ನಿವೃತ್ತಿ ಮಾಡಲಾಗುತ್ತದೆ. ಯಾವುದೇ ವ್ಯಕ್ತಿಗೆ ೬೦ ವರ್ಷವಾದ ಮೇಲೆ ಅವರಿಗೆ ಕೆಲಸ ಮಾಡಲು ದೈಹಿಕವಾಗಿ ಸಾಧ್ಯವಾಗುವುದಿಲ್ಲ. ಅವರು ವಿದ್ಯಾವಂತರೂ/ಬುದ್ದಿವಂತರಾಗಿದ್ದರೂ ಕೂಡ ಅವರ ದೇಹ ಮತ್ತು ಮನಸ್ಸು ಅವರಿಗೆ ಸ್ಪಂದಿಸುವುದಿಲ್ಲ ಎಂಬ ಕಾರಣ ಕೊಡುತ್ತಾರೆ. ಅದೇ ರೀತಿ ಕ್ರಿಕೆಟ್ ಆಡುವ ಮಂದಿ ಸುಮಾರು ೩೫-೩೮ ವರ್ಷಗಳ ಹೊತ್ತಿಗೆ ಸಾಮಾನ್ಯವಾಗಿ ನಿವೃತ್ತರಾಗುತ್ತಾರೆ. ಅದೇ ರೀತಿ ಹಾಕಿ, ಕಾಲ್ಚೆಂಡು, ಟೆನಿಸ್, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಗಳಲ್ಲಿ ತೊಡಗಿರಿಸಿಕೊಂಡಿರುವ ಅನೇಕ ಕ್ರೀಡಾಪಟುಗಳು ದೇಹ ಸ್ಪಂದಿಸುವುದಿಲ್ಲ ವೆಂಬ ಕಾರಣ ಒಡ್ಡಿ ನಿವೃತ್ತರಾಗುತ್ತಾರೆ.

ಇನ್ನು ಚೆಸ್, ಗಾಲ್ಫ್, ಸ್ನೂಕರ್ ಮುಂತಾದ ಕ್ರೀಡೆಗಳಿಗೆ ದೈಹಿಕ ಬಲ ಬೇಡವಾಗಿದ್ದರೂ ಮುಂದಿನ ಪೀಳಿಗೆಗೆ ಅವಕಾಶ ಮಾಡಿಕೊಡುವ ಮೂಲಕ ಅವರು ಕ್ರೀಡೆಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ನಿವೃತ್ತರಾಗುತ್ತಾರೆ. ಇನ್ನು ಕಂಪನಿಗಳ ಸಿ.ಇ.ಒ ಗಳಾದ ನಾರಾಯಣ ಮೂರ್ತಿ, ರತನ್ ಟಾಟ ಅವರುಗಳು ತಮ್ಮ ವಯಸ್ಸಿನ ಕಾರಣ ನೀಡಿ ನಿವೃತ್ತರಾಗಿದ್ದಾರೆ. ಆದರೆ ನಮ್ಮ ರಾಜಕಾರಣಿಗಳು ಉಹುಂ, ಅವರಿಗೆ ೭೦-೮೦-೯೦ ಆದರೂ ರಾಜಕೀಯದಿಂದ ನಿವೃತ್ತರಾಗುವುದು ಬಹಳ ಕಡಿಮೆ. ದೇಶವನ್ನು ಆಳುವವರಿಗೆ ವಯಸ್ಸು ಜಾಸ್ತಿಯಾಗಿದ್ದರೆ ಅನುಭವದಿಂದ ಇನ್ನೂ ಚೆನ್ನಾಗಿ ಆಡಳಿತ ನಡೆಸಬಹುದೆಂದೇ? ಅಥವಾ ಯುವಕರಿಗೆ ರಾಜ್ಯದ/ದೇಶದ ಚುಕ್ಕಾಣಿ ಹಿಡಿಯಲು ಬಾರದೆಂದೇ? ಅವರಿಗೆ ಆಡಳಿತ ನಡೆಸಲು ಅನುಭವದ ಕೊರತೆಯುಂಟಾಗುವುದೆಂದೇ? ನಾವು ಮಾಡಿರುವ ಕರ್ಮಕಾಂಡಗಳನ್ನು ನಾವು ಸಾಯುವವರಿಗೂ ಮುಚ್ಚಿಡಲು ಸಹಾಯವಾಗುವುದೆಂದೇ?  ಕಾರಣ ಏನೇ ಇರಲಿ. ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ವಯಸ್ಸಾದವರೇ ಅಧಿಕ.

ಪ್ರಾಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು, ವಿದೇಶಾಂಗ ಸಚಿವರು, ಹೀಗೆ ಎಲ್ಲಾ ಉನ್ನತ ಹುದ್ದೆಯಲ್ಲಿರುವವರ ವಯಸ್ಸು ಅಂದಾಜು ೭೦-೮೦ ವರ್ಷಗಳ ಹತ್ತಿರ ಇದೆ. ವಿದೇಶಗಳಲ್ಲಿ ಈ ಪರಿಸ್ಥಿತಿ ಇಲ್ಲ. ಅಲ್ಲಿ ಹೆಚ್ಚಿನ ಸಂಖ್ಯೆಯ ಮಂತ್ರಿವರ್ಯರು ೪೦-೫೦ ವರ್ಷಗಳ ಹತ್ತಿರ ಇರುವವರು. ನಮ್ಮ ದೇಶದಲ್ಲಿ ಇದು ಯಾಕೆ ಸಾಧ್ಯವಾಗುವುದಿಲ್ಲ?

೩೫ ರಿಂದ ೩೦ ವರ್ಷದ ಒಳಗಿರುವವರನ್ನು ಪಕ್ಷದ ಸದಸ್ಯರನ್ನಾಗಿಯೂ, ೩೦ ರಿಂದ ೩೫ ವರ್ಷದ ಒಳಗಿರುವವರನ್ನು ನಗರ ಸಭೆಯ ಸದಸ್ಯರನ್ನಾಗಿಯೂ, ೩೫ ರಿಂದ ೪೦ ವರ್ಷದ ಒಳಗಿರುವವರನ್ನು ಶಾಸಕ ಮತ್ತು ಮಂತ್ರಿಗಳನ್ನಾಗಿಯೂ, ೪೦ ರಿಂದ ೪೫ ವರ್ಷದ ಒಳಗಿರುವವರನ್ನು ಮುಖ್ಯಮಂತ್ರಿಯಾಗಿಯೂ, ೪೫ ರಿಂದ ೫೦ ವರ್ಷದ ಒಳಗಿರುವವರನ್ನು ಲೋಕಸಭಾ ಸದಸ್ಯ ಮತ್ತು ಮಂತ್ರಿಗಳನ್ನಾಗಿಯೂ, ೫೦ ರಿಂದ ೬೦ ವರ್ಷದ ಒಳಗಿರುವವರನ್ನು ಪ್ರಧಾನ ಮಂತ್ರಿ, ರಾಷ್ಟ್ರಪತಿಗಳನ್ನಾಗಿಯೂ ಮತ್ತು ೬೦ ರಿಂದ ೬೫ ವರ್ಷದ ಒಳಗಿರುವವರನ್ನು ಪಕ್ಷದ ಕೆಲಸ ಕಾರ್ಯಗಳಿಗೆ ವಹಿಸಬಹುದಲ್ಲವೇ.  ೬೫ ವರ್ಷಕ್ಕೆ ಕಡ್ಡಾಯವಾಗಿ ನಿವೃತ್ತಿ ಎಂಬ ವಯಸ್ಸಿನ ಮಿತಿಯನ್ನು ರಾಜಕಾರಣಿಗಳಿಗೆ ಮಾಡಬಾರದೇಕೆ? ಯುವಕ/ಯುವತಿಯರಿಗೆ ಹಿರಿಯರ ಮಾರ್ಗದರ್ಶನದಲ್ಲಿ ಕಲಿಯಲು ಅವಕಾಶವಿರುತ್ತದೆ. ಹೊಸ ಹೊಸ ಕಲ್ಪನೆಗಳಿರುವ ಯುವ ಶಕ್ತಿ ಮತ್ತು ಅನುಭವವಿರುವ ಹಿರಿಯರು ಒಂದುಗೂಡಿ ರಾಜ್ಯ/ದೇಶವನ್ನು ಮುನ್ನೆಡೆಸಿದಂತಾಗುತ್ತಲ್ಲವೇ?

Wednesday, 17 October 2012

ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ : ಭಾಗ -೪


ಕಳೆದ ಸಂಚಿಕೆಯಿಂದ

ನಮಗೆಲ್ಲರಿಗೂ ಕರ್ನಾಟಕದಲ್ಲಿ ನಮ್ಮದೇ ಆದ ಒಂದು ಪ್ರಾದೇಶಿಕ ಪಕ್ಷವಿದ್ದರೆ ನಮಗೆ ಹೆಚ್ಚು ಅನುಕೂಲವಾಗಬಹುದೆಂಬ ನಂಬಿಕೆ ಇದೆ. ಈ ಮಾತಿನಲ್ಲಿ ಹೆಚ್ಚಿನ ಹುರುಳಿದೆ. ನಮ್ಮ ದೇಶದಲ್ಲಿ ಈಗಿರುವ ಸಂಧರ್ಭದಲ್ಲಿ ಒಂದೇ ಪಕ್ಷವು ಅಧಿಕಾರ ನಡೆಸುವ ಪರಿಸ್ಥಿತಿ ಇಲ್ಲ. ಅನೇಕ ಪಕ್ಷಗಳು ಕೂಡಿ ಅಧಿಕಾರಕ್ಕೆ ಬರುವ ಪರಿಸ್ಥಿತಿಯೇ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ನಮ್ಮದೇ ಒಂದು ಪ್ರಾದೇಶಿಕ ಪಕ್ಷವು ಕೇಂದ್ರದಲ್ಲಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆದ್ದು, ನಮ್ಮ ರಾಜ್ಯದಲ್ಲೂ ಅದೇ ಪಕ್ಷವು ಅಧಿಕಾರದಲ್ಲಿದ್ದರೆ ನಮಗೆ ಬಹಳ ಅನುಕೂಲವಾಗುವುದು ಎಂಬ ಭಾವನೆ ಹೆಚ್ಚಿನ ಕನ್ನಡಿಗರಲ್ಲಿ ಇದೆ.  ಇದಕ್ಕೆ ಕಾಲವೇ ಉತ್ತರ ಕೊಡಬಹುದೇನೋ?
ಇವತ್ತು ಒಂದು ಪ್ರಾದೇಶಿಕ ಪಕ್ಷವೊಂದು ಉದಯವಾಗಿ ನಾಳೆಯೇ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಅಕಸ್ಮಾತ್ ಹಾಗೇನಾದರೂ ಆದರೆ ಅದು ಹೆಚ್ಚು ಕಾಲ ಬದುಕುವುದೂ ಇಲ್ಲ. ಪಕ್ಷವೊಂದು ಅಧಿಕಾರಕ್ಕೆ ಬರಬೇಕಾದರೆ ದೂರದೃಷ್ಟಿ, ತಾಳ್ಮೆ, ಚತುರತೆ, ಸಿದ್ದಾಂತ, ಜನಬಲ ಹೀಗೆ ಎಲ್ಲವೂ ಮುಖ್ಯವಾಗುತ್ತದೆ. ಪ್ರಾದೇಶಿಕ ಪಕ್ಷವೊಂದು ಚೆನ್ನಾಗಿ ಮೊದಲು ಜನರ ಜೊತೆ ಚೆನ್ನಾಗಿ ಬೆರೆತು ಸಾಮಾಜಿಕ ಕಳಕಳಿಯೊಂದಿಗೆ ೨೦೨೦-೨೫ರ ಅಧಿಕಾರಕ್ಕೆ ಬರುವ ಗುರಿಯೊಂದಿಗೆ ಸ್ಥಾಪಿಸಿದರೆ ನಮ್ಮ ಕರ್ನಾಟಕವೂ ಕಲ್ಯಾಣವಾಗಬಹುದು.

ನಾವುಗಳು ತಮಿಳರಿಂದ ಬಹಳ ಕಲಿಯುವುದು ಇದೆ. ಸ್ವಾತಂತ್ರ್ಯ ಬಂದು ೬೫ ವರ್ಷಗಳಾದರೂ ನಮ್ಮಲ್ಲಿ ನೆಟ್ಟಗೆ ಒಂದು ಪ್ರಾದೇಶಿಕ ಪಕ್ಷವಿಲ್ಲ. ಸಧ್ಯದ ಮಟ್ಟಿಗೆ ಪ್ರಾದೇಶಿಕ ಪಕ್ಷವೊಂದು ಸ್ಥಾಪನೆಯಾಗಿ ಅದು ಅಧಿಕಾರಕ್ಕೆ ಬರುವುದೂ ಸಹ ಕನಸೇನೋ? ತಮಿಳು ನಾಡಿನಲ್ಲಿ ಒಂದಲ್ಲಾ ಎರಡೆರೆಡು ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುತ್ತದೆ. ಒಂದು ಪಕ್ಷ ಸರಿಯಾಗಿ ಆಡಳಿತ ನಡೆಸದಿದ್ದರೆ ಅವರನ್ನು ಮನೆಗೆ ಕಳುಹಿಸಿ ಮತ್ತೊಂದು ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆಯೇ ಹೊರತು ಬೇರೆ ರಾಷ್ಟೀಯ ಪಕ್ಷಕ್ಕೆ ಅಲ್ಲಿ ಮಣೆ ಹಾಕುವುದಿಲ್ಲ, ಅಲ್ಲದೆ ಇನ್ನೂ ಸುಮಾರು ೫-೬ ಪ್ರಾದೇಶಿಕ ಪಕ್ಷಗಳನ್ನು ಇವರನ್ನು ಎಚ್ಚರಿಸಲು ಇಟ್ಟುಕೊಂಡಿದ್ದಾರೆ. ನಾವು ಇನ್ನಾದರೂ ನಿದ್ದೆಯಿಂದ ಮೇಲೆ ಏಳದೇ ಇದ್ದರೆ ಕನ್ನಡಿಗರು ವೀರರು, ಧೀರರು, ಶೂರರು, ಸ್ವಾಭಿಮಾನಿಗಳು ಅಂತ ಕೇವಲ ಪುಸ್ತಕದಲ್ಲಿ ಮಾತ್ರ ಓದಬೇಕಾಗಬಹುದು ಅಥವಾ “ಎಲ್ಲಿಯವರೆಗೂ ಹೋರಾಟ, ಸಾಯುವವರಿಗೂ ಹೋರಾಟ” ಅಂತ ನಾವು ಸಾಯುವವರಿಗೂ ಹೋರಾಟ ಮಾಡುತ್ತಲೇ ಇರಬೇಕೇನೋ? ಉಳಿದವರು ನಮ್ಮ ಹೋರಾಟದ ಬೆಂಕಿಯಲ್ಲಿ ಆಡುಗೆಯನ್ನು ಮಾಡಿಕೊಂಡು ಸುಖವಾಗಿ ಊಟ ಮಾಡಿ ತಿಂದು ಮುಗಿಸುತ್ತಾರೆ. ನಾವು ನೋಡುತ್ತಲೇ ಇರುತ್ತೇವೆ. (ಮುಗಿಯಿತು)