ಕಳೆದ ಸಂಚಿಕೆಯಿಂದ:
ಒಂದು ಪ್ರಖ್ಯಾತವಾದ ಪಾದರಕ್ಷೆ ಸಂಸ್ಥೆಯು ತಮ್ಮ ಉತ್ಪನ್ನಗಳನ್ನು ವಿವಿಧ ದೇಶಗಳಲ್ಲಿ ವಿಸ್ತರಿಸುವ ಬಯಕೆಯಿಂದಾಗಿ ತಮ್ಮಲ್ಲಿರುವ ಇಬ್ಬರು ಮಾರಾಟ ಪ್ರತಿನಿಧಿಗಳನ್ನು ಆಫ್ರಿಕಾ ದೇಶಕ್ಕೆ ಕಳುಹಿಸಿದ್ದರು. ಮೊದಲು ಒಬ್ಬ ಪ್ರತಿನಿಧಿ ಆಫ್ರಿಕಾ ದೇಶದಲ್ಲಿ ಬಂದಿಳಿದಾಗ ಅವನ ಕಣ್ಣಿಗೆ ಕಂಡದ್ದು ಅವರಲ್ಲಿ ಯಾರೂ ಪಾದರಕ್ಷೆ ಅಥವಾ ಶೂ ಧರಿಸಿಲ್ಲದೆ ಇದ್ದದ್ದು. ಅವನಿಗೆ ಬಹಳ ಭ್ರಮ ನಿರಸನವಾಯಿತು. ಅವನು ತನ್ನ ಮಾಲೀಕನಿಗೆ ಇಲ್ಲಿಯ ಜನರಿಗೆ ಯಾರಿಗೂ ಪಾದರಕ್ಷೆ/ಶೂ ಧರಿಸುವ ಅಭ್ಯಾಸವಿಲ್ಲ. ಇವರೆಲ್ಲರೂ ಬರೀ ಕಾಲಿನಲ್ಲೇ ಓಡಾಡುವುದು. ಇಲ್ಲಿ ನಾವು ನಮ್ಮ ಕಾರ್ಖಾನೆಯನ್ನು ಸ್ಥಾಪಿಸಿದರೆ ನಮಗೆ ಬಹಳ ನಷ್ಟವುಂಟಾಗುವುದು. ಇಲ್ಲಿ ನಾವು ಯಾವುದೇ ಕಾರ್ಖಾನೆ ಅಥವಾ ಮಳಿಗೆಯನ್ನು ತೆಗೆಯುವುದು ಬೇಡ ಎಂಬ ವರದಿಯನ್ನು ಸಲ್ಲಿಸಿದನು.
ಮತ್ತೊಬ್ಬ ಪ್ರತಿನಿಧಿಯು ಆಫ್ರಿಕಾ ದೇಶಕ್ಕೆ ಕಾಲಿಟ್ಟಾಗ ಅವನಿಗೂ ಕಂಡಿದ್ದು ಅಲ್ಲಿನ ಜನ ಬರೀ ಕಾಲಿನಲ್ಲೇ ಓಡಾದುವುದು. ಇದನ್ನು ಕಂಡು ಅವನಿಗೆ ಅತ್ಯಾಶ್ಚರ್ಯವಾಯಿತು. ಅವನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಕೂಡಲೇ ತನ್ನ ಮುಖ್ಯಸ್ಥನಿಗೆ ಇಲ್ಲಿ ಎಲ್ಲರೂ ಬರೀ ಕಾಲಿನಲ್ಲೇ ಓಡಾಡುವುದು. ನಾವು ಇಲ್ಲಿ ನಮ್ಮ ಮಳಿಗೆ ಮತ್ತು ಕಾರ್ಖಾನೆಯನ್ನು ಸ್ಥಾಪಿಸೋಣ. ನಾವು ಇಲ್ಲಿಯ ಎಲ್ಲಾ ಮಕ್ಕಳು/ಗಂಡಸರು/ಹೆಂಗಸರು/ವೃದ್ದರು ಎಲ್ಲರಿಗೂ ಪಾದರಕ್ಷೆಯ ಮಹತ್ವವನ್ನು ತಿಳಿಸೋಣ, ಅವರಿಗೆ ಅದನ್ನು ಧರಿಸದರೆ ಆಗುವ ಉಪಯೋಗವನ್ನು ತಿಳಿಯ ಪಡಿಸೋಣ. ನಮ್ಮ ಉತ್ಪನ್ನಗಳನ್ನು ನಾವು ಇಲ್ಲಿ ಅತೀ ಹೆಚ್ಚು ಮಾರಾಟ ಮಾಡಬಹುದು ಎಂಬ ವರದಿಯನ್ನು ಕಳುಹಿಸಿದನು. ಆ ಸಂಸ್ಥೆಯು ತನ್ನ ಎರಡನೇ ಪ್ರತಿನಿಧಿಯ ಮಾತಿನಂತೆ ಅಲ್ಲಿ ಒಂದು ದೊಡ್ಡ ಕಾರ್ಖಾನೆ/ದೊಡ್ಡ ಮಳಿಗೆಯನ್ನು ಸ್ಥಾಪಿಸಿ ತಮ್ಮ ವ್ಯಾಪಾರ ವಹಿವಾಟನ್ನು ಇನ್ನೂ ಉತ್ತಮ ಪಡಿಸಿಕೊಂಡರು ಎಂಬುದನ್ನು ಹೇಳಬೇಕಾಗಿಲ್ಲ ಅಲ್ಲವೇ?
ಹೀಗೆ, ಒಬ್ಬೊಬ್ಬರ ಕಲ್ಪನೆ ಒಂದೊಂದು ರೀತಿಯಲ್ಲಿ ಇರುತ್ತದೆ. ಅದನ್ನು ನಾವು ಹೇಗೆ ವ್ಯವಹಾರದ ದೃಷ್ಟಿಯಲ್ಲಿ ನೋಡುತ್ತೇವೆ ಎಂಬುದು ಮುಖ್ಯ. ಶ್ರೀಮಂತರು ಪ್ರತಿಯೊಂದು ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿ ಎಲ್ಲಿ ತಮ್ಮ ವ್ಯಾಪಾರ ವಹಿವಾಟನ್ನು ವಿಸ್ತರಿಸಲು ಸಾಧ್ಯವೋ, ಅಲ್ಲೆಲ್ಲಾ ವಿಸ್ತರಿಸಲು ಸದಾ ಯೋಚಿಸುತ್ತಿರುತ್ತಾರೆ. ತಮ್ಮ ಶ್ರೀಮಂತಿಕೆಯನ್ನು ಜತನದಿಂದ ಕಾಪಾಡಿಕೊಳ್ಳುತ್ತಾರೆ ಮತ್ತು ಅದನ್ನು ಇನ್ನಷ್ಟು ಮತ್ತಷ್ಟು ಬೆಳೆಸಲು ಹಾತೊರೆಯುತ್ತಿರುತ್ತಾರೆ. ಶ್ರೀಮಂತರಿಗೆ ಹಣ ಸಂಪಾದನೆ ನಿರಂತರ ಪ್ರಕ್ರಿಯೆಯಾಗಿರುತ್ತದೆ. ಹಾಗಾಗಿ ಅವರು ಯಾವಗಲೂ ಶ್ರೀಮಂತರಾಗೇ ಉಳಿಯುತ್ತಾರೆ, ಲಕ್ಷ್ಮೀ ಪುತ್ರರೆಂದೆನಿಸಿಕೊಳ್ಳುತ್ತಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಕೇವಲ ಹಣವಿದ್ದರೆ ಮಾತ್ರ ಶ್ರೀಮಂತನೆಂದು ಹೇಳಲಿಕ್ಕಾಗುವುದಿಲ್ಲ. ಶ್ರೀಮಂತಿಕೆಯನ್ನು ಅನುಭವಿಸುವುದಕ್ಕೆ ಸಮಯ, ಆರೋಗ್ಯ, ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ಸುಖ, ನೆಮ್ಮದಿ ಎಲ್ಲವೂ ಜೊತೆಗೂಡಿದಾಗ ಶ್ರೀಮಂತಿಕೆಗೆ ನಿಜವಾದ ಅರ್ಥ ಬರುತ್ತದೆ. ತಾಯಿ ಲಕ್ಷಿ ದೇವಿಯ ಕೃಪಾಕಟಾಕ್ಷ ಎಲ್ಲರಿಗೂ ದೊರೆಯುವಂತಾಗಲಿ ಎಂಬು ಸದುದ್ದೇಶದಿಂದ…………(ಮುಗಿಯಿತು)
No comments:
Post a Comment